Athree Book Center

ಎಣ್ಣೆ ಬೇಕು ದೀವಟಿಗೆಗೆ!

December 7, 2009 · 9 Comments

ಆಹಾಹೋsssss ಹ್ಹೋss ಹ್ಹೋಯ್!

ಐದು ತಿಂಗಳ ದೂರದಲ್ಲಿ ಕೇಳಿತೀ ಮೊದಲ ಅಟ್ಟಹಾಸ. ಡಾ| ಮನೋಹರ ಉಪಾಧ್ಯ, ಎರಡು ಯಕ್ಷಪ್ರಸಂಗಗಳ ದೀವಟಿಗೆ ಆಟ ದಾಖಲೀಕರಣದ ಯೋಜನೆಗೆ ಬಣ್ಣ ಬಳಿದು, ವೇಷ ತೊಟ್ಟು, ಗೆಜ್ಜೆ ಕಟ್ಟಿಯಾಗಿತ್ತು! ಈ (ಕೆಲಸದಲ್ಲಿ) ರಾಕ್ಷಸನಿಗೆ ಚಂಡೆ ಮದ್ದಳೆಗಳ ಹಿಮ್ಮೇಳವಷ್ಟೇ ನನ್ನದು. ನನ್ನ ಮಗ (ಸಿನಿ-ನಿರ್ದೇಶಕ) ಅಭಯಸಿಂಹನ ಪೂರ್ಣ ತಾಂತ್ರಿಕ ಜವಾಬ್ದಾರಿಯಲ್ಲಿ ದಾಖಲೀಕರಣದ ವೆಚ್ಚಗಳ ಅಂದಾಜುಪಟ್ಟಿ ಮಾಡಿಸಿದೆವು. ತಂಡ ಮತ್ತು ಪ್ರಸಂಗಗಳ ಆಯ್ಕೆಯಲ್ಲಿ ಬಡಗು ತಿಟ್ಟಿಗೆ ಅದ್ವಿತೀಯ ಗುರು ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದ ಉಡುಪಿ ಯಕ್ಷಗಾನ ಕೇಂದ್ರ. ಕೆಲಕಾಲದಿಂದ ಯಕ್ಷಗಾನಕ್ಕೆ ಸಾಂಪ್ರದಾಯಿಕ ಚಂದ ಮರುಕಳಿಸಲು ಕ್ರಿಯಾತ್ಮಕವಾಗಿ ಹೆಣಗುತ್ತಿರುವ ಪೃಥ್ವೀ ರಾಜ್ ಕವತ್ತಾರ್‌ಗೆ ತೆಂಕು ತಿಟ್ಟಿನ ತಂಡವೊಂದರ ಸಂಯೋಜನೆ ಮತ್ತು ನಿರ್ದೇಶನವನ್ನೂ ವಹಿಸಿಕೊಟ್ಟೆವು. ಮಳೆ ಪೂರ್ಣ ನಿಂತ ಮೇಲಿನ ಒಂದು ದಿನವನ್ನು ಪ್ರದರ್ಶನಕ್ಕೆ  ನಿಶ್ಚಯಿಸಿಕೊಂಡದ್ದೂ ಆಯ್ತು.

Keep reading →

→ 9 CommentsCategories: ಯಕ್ಷಗಾನ

ಪರಿಸರ ಚಳವಳಿಯ ಸಾಂಸ್ಕೃತಿಕ ಮುಖ

November 26, 2009 · 8 Comments

“ಪರ್ವತಾರೋಹಣ ವನ್ಯಸಂರಕ್ಷಣೆಗಳ ಬಗ್ಗೆ ಮಾತಾಡಿದ ತೀವ್ರತೆಯಲ್ಲಿ ನೀವು ಯಕ್ಷಗಾನವೋ ಇನ್ನೊಂದು ಕಲಾಪ್ರಕಾರದ ಬಗ್ಗೆಯೋ ಮಾತಾಡ್ತೀರಿ. ಅದನ್ನು ಪರಿಸರ ಪ್ರೀತಿ ಎನ್ನಬಹುದು. ಇದು?” ಮಣ್ಣು, ನೀರು, ಗಾಳಿ, ಹಸಿರು, ಜೀವವೈವಿಧ್ಯ ಇತ್ಯಾದಿ ಹೆಸರಿಸುವ ಎಲ್ಲಾ ಪ್ರಾಕೃತಿಕ ಸತ್ಯಗಳು ಮನುಷ್ಯನ ಜೀವ-ಪರಿಸರವನ್ನು ಪೋಷಿಸಿದಷ್ಟೇ ಮುಖ್ಯವಾಗಿ ಆಗಬೇಕಾದದ್ದು ಮನುಷ್ಯನ ಭಾವ-ಪರಿಸರದ ಪೋಷಣೆ. ಅದಕ್ಕಾಗಿ ಶುದ್ಧ ಗಾಳಿ, ಶುದ್ಧ ನೀರು ಎಂದಿತ್ಯಾದಿ ಹಕ್ಕೊತ್ತಾಯ ನಡೆಸಿದಷ್ಟೇ ತೀವ್ರವಾಗಿ ರುಚಿ ಶುದ್ಧವಾದ ಕಲೆ, ರಾಜಕಾರಣರಹಿತ ಧರ್ಮ, ಪ್ರದರ್ಶನಕ್ಕೆ ಕಳೆದುಹೋಗದ ಸಂಸ್ಕೃತಿಗಳ ಬಗ್ಗೆ ಕೆಲಸ ಮಾಡಬೇಕಾಗಿದೆ.

Keep reading →

→ 8 CommentsCategories: ವನ್ಯಲೋಕ · ಹೀಗೆ ಒಂದಿಷ್ಟು

ದೀವಟಿಗೆ ಕಥಾನಕವನ್ನು ಬಣ್ಣಿಪೆನು ಪೊಡಮಡುತ

November 19, 2009 · 4 Comments

ಕೇಳಿ ಹೊಡೆದ್ರೀ, ಸಭಾಕ್ಲಾಸ್ ಕೊಟ್ರೀ, ನಿಜದ ದೀವಟಿಗೆ ಆಟ ಎಲ್ರೀ ಎನ್ನಬೇಡಿ. ಹಾಡು, ಭಾಷಣಗಳನ್ನಾದರೋ ನನ್ನ ಮಿತಿಯ ಲಿಖಿತ ಸಾಹಿತ್ಯದಲ್ಲಿ ಹಿಂದಿನೆರಡು ಕಥಾನಕಗಳಲ್ಲಿ ‘ಸುಧಾರಿಸಿದ್ದು’ ನಿಜ. ಅಂದ ಮಾತ್ರಕ್ಕೆ ಬಹುಮುಖೀ ಯಕ್ಷಗಾನ ಬಯಲಾಟಕ್ಕೆ ನಾನು ನೇರ ನುಗ್ಗುವುದು ಸರಿಯಾಗದು. ಹಾಗಾಗಿ ಅಂದಿನ ಪ್ರದರ್ಶನದ ಕುರಿತು ಸುಧಾ ವಾರಪತ್ರಿಕೆಯಲ್ಲಿ ನನ್ನ ಹೆಸರಿನಲ್ಲಿ ಪ್ರಕಟವಾದ (ಲಿಪಿಕಾರ ನಾ, ಕವಿ ನಂಬಿಯಾರ್) ಲೇಖನದ ಸಂಕ್ಷಿಪ್ತ ರೂಪವನ್ನು ಮೊದಲು ನಕಲಿಸುತ್ತೇನೆ.

Keep reading →

→ 4 CommentsCategories: ಯಕ್ಷಗಾನ

ದೀವಟಿಗೆಯಲ್ಲಿ ಸಭಾಕ್ಲಾಸ್

November 12, 2009 · 11 Comments

ಹೆಸರು ಕ್ಷೀರಸಾಗರ, ಮಜ್ಜಿಗೆಗೆ ಗತಿಯಿಲ್ಲ ಎಂಬಂತೇ ಇತ್ತು ನಮ್ಮ ‘ಅಭಯಾರಣ್ಯ’; ತುಂಡು ನೆರಳಿಲ್ಲ. ಆದರೂ ಪೂರ್ವಾಹ್ನವಿಡೀ ರಣಗುಡುವ ಬಿಸಿಲಿನಲ್ಲಿ, ಕಲ್ಲುಮುಳ್ಳುಗಳ ಪದವಿನಲ್ಲಿ ಕೊನೆಗಳಿಗೆಯ ಸಿದ್ಧತೆಗಳನ್ನು ಮಾಡಿಕೊಂಡೆವು. ದಾರಿಬದಿಗೆ ಅಭಯಾರಣ್ಯದ ಬ್ಯಾನರು ಕಟ್ಟಿದ್ದಾಗಿತ್ತು. ಅಲ್ಲೆ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಪಾರ್ಕಿಂಗ್, ನಡೆದು ಬರುತ್ತಿದ್ದಂತೆ ಮೊದಲ ಗೇಟಿನ ಬಳಿ ವಿದ್ಯುಜ್ಜನಕ, ಅಭಯಾರಣ್ಯದ ಗೇಟಿನ ಬುಡದಲ್ಲಿ ಜನರೇಟರಿನ ಮೇಲೊಂದು ಕಣ್ಣಿಟ್ಟುಕೊಂಡು, (ನನ್ನ ಪ್ರಕಟಣೆಗಳ ಮತ್ತು ಆಯ್ದ ವನ್ಯ ಸಂಬಂಧೀ) ಪುಸ್ತಕಗಳ ಸಣ್ಣ ಮಾರಾಟ ಪ್ರದರ್ಶನಕ್ಕೆ ಅಂಗಡಿಯ ನನ್ನ ಬಲಗೈ – ಶಾಂತಾರಾಮ ಸಜ್ಜುಗೊಂಡಿದ್ದ. ಅವನ ಎದುರಿಗೆ ಮೊಂಟೆಪದವಿನ ಹೋಟೆಲ್ ಬಾಬು ನಮ್ಮ ಕ್ಯಾಂಟೀನ್ ನಿರ್ವಣೆಯಲ್ಲಿ ನಿರತನಾಗಿದ್ದ. ವೈಭವ ಇಲ್ಲ, ಆದರೆ ಹೊಟ್ಟೆಗಟ್ಟಿಗೆ ಅವಲಕ್ಕಿ, ಉಪ್ಪಿಟ್ಟು, ಬನ್ನು, ಬಾಳೇಹಣ್ಣು, ಮಜ್ಜಿಗೆ, ಕಾಪಿ, ಚಾ ತಿಂದಷ್ಟೂ (ಅದನ್ನು ಕೆಲವು ಪ್ರತಿಷ್ಠಿತರು ‘ಕೇಳಿದಷ್ಟೂ’ ಎಂದು ಅವರ ಅನುಕೂಲಕ್ಕೆ ತಿದ್ದಿಕೊಂಡು ಪಂಟಿಬಿರಿಯ ತಿಂದದ್ದಲ್ಲದೆ ಬನ್ಸು ಕಟ್ಟಿಕೊಂಡು ಹೋದದ್ದನ್ನು ಹೇಳದಿರಲಾರೆ) ಉಚಿತವಾಗಿ ಕೊಡಲು “On your mark” ಆಗಿದ್ದ. ಪ್ರೇಕ್ಷಾಂಗಣದಲ್ಲಿ ದಪ್ಪ ತಾರ್ಪಾಲನ್ನು ಹರಡಿದ್ದಲ್ಲದೆ, ಪ್ರಾಯಸ್ಥರಿಗೆ ಅಥವಾ ಸೊಂಟಬಾಗದವರಿಗೆ ಒಂದು ಬದಿಯಲ್ಲಿ ಇಪ್ಪತ್ತು ಮೂವತ್ತು ಕುರ್ಚಿಗಳನ್ನೂ ಹಾಕಿದ್ದೆವು. ರಂಗ, ಚೌಕಿಗಳಲ್ಲಿ ನಮ್ಮ ಜವಾಬ್ದಾರಿಯನ್ನಷ್ಟೂ ಚೊಕ್ಕ ಮಾಡಿದೆವು. ‘ಕಾಡ್ಮನೆ’ಯೊಳಗೆ ಇರುವ, ಬರಬಹುದಾದ ಜನರ ಲೆಕ್ಕಾಚಾರದಲ್ಲಿ (ನನ್ನ ಹೆಂಡತಿ) ದೇವಕಿ, ನನ್ನಮ್ಮನ ಸಹಾಯದಲ್ಲಿ (ಸುಮಾರು ಮೂವತ್ತು ಮಂದಿಗೆ) ಅಡುಗೆ ಮಾಡಿ ಮುಗಿಸುವುದರೊಳಗೆ ನಮ್ಮ ರಾಗ ಸುರುವಾಗಿತ್ತು “ದೊಡ್ಡ ಬಟ್ಟಲಮ್ಮಾ ದೊಡ್ಡ ಬಟ್ಟಲೂ.”

Keep reading →

→ 11 CommentsCategories: ಯಕ್ಷಗಾನ