Athree Book Center

ದೀವಟಿಗೆ ಕಥಾನಕವನ್ನು ಬಣ್ಣಿಪೆನು ಪೊಡಮಡುತ

November 19, 2009 · 1 Comment

ಕೇಳಿ ಹೊಡೆದ್ರೀ, ಸಭಾಕ್ಲಾಸ್ ಕೊಟ್ರೀ, ನಿಜದ ದೀವಟಿಗೆ ಆಟ ಎಲ್ರೀ ಎನ್ನಬೇಡಿ. ಹಾಡು, ಭಾಷಣಗಳನ್ನಾದರೋ ನನ್ನ ಮಿತಿಯ ಲಿಖಿತ ಸಾಹಿತ್ಯದಲ್ಲಿ ಹಿಂದಿನೆರಡು ಕಥಾನಕಗಳಲ್ಲಿ ‘ಸುಧಾರಿಸಿದ್ದು’ ನಿಜ. ಅಂದ ಮಾತ್ರಕ್ಕೆ ಬಹುಮುಖೀ ಯಕ್ಷಗಾನ ಬಯಲಾಟಕ್ಕೆ ನಾನು ನೇರ ನುಗ್ಗುವುದು ಸರಿಯಾಗದು. ಹಾಗಾಗಿ ಅಂದಿನ ಪ್ರದರ್ಶನದ ಕುರಿತು ಸುಧಾ ವಾರಪತ್ರಿಕೆಯಲ್ಲಿ ನನ್ನ ಹೆಸರಿನಲ್ಲಿ ಪ್ರಕಟವಾದ (ಲಿಪಿಕಾರ ನಾ, ಕವಿ ನಂಬಿಯಾರ್) ಲೇಖನದ ಸಂಕ್ಷಿಪ್ತ ರೂಪವನ್ನು ಮೊದಲು ನಕಲಿಸುತ್ತೇನೆ.

Keep reading →

→ 1 CommentCategories: ಯಕ್ಷಗಾನ

ದೀವಟಿಗೆಯಲ್ಲಿ ಸಭಾಕ್ಲಾಸ್

November 12, 2009 · 9 Comments

ಹೆಸರು ಕ್ಷೀರಸಾಗರ, ಮಜ್ಜಿಗೆಗೆ ಗತಿಯಿಲ್ಲ ಎಂಬಂತೇ ಇತ್ತು ನಮ್ಮ ‘ಅಭಯಾರಣ್ಯ’; ತುಂಡು ನೆರಳಿಲ್ಲ. ಆದರೂ ಪೂರ್ವಾಹ್ನವಿಡೀ ರಣಗುಡುವ ಬಿಸಿಲಿನಲ್ಲಿ, ಕಲ್ಲುಮುಳ್ಳುಗಳ ಪದವಿನಲ್ಲಿ ಕೊನೆಗಳಿಗೆಯ ಸಿದ್ಧತೆಗಳನ್ನು ಮಾಡಿಕೊಂಡೆವು. ದಾರಿಬದಿಗೆ ಅಭಯಾರಣ್ಯದ ಬ್ಯಾನರು ಕಟ್ಟಿದ್ದಾಗಿತ್ತು. ಅಲ್ಲೆ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಪಾರ್ಕಿಂಗ್, ನಡೆದು ಬರುತ್ತಿದ್ದಂತೆ ಮೊದಲ ಗೇಟಿನ ಬಳಿ ವಿದ್ಯುಜ್ಜನಕ, ಅಭಯಾರಣ್ಯದ ಗೇಟಿನ ಬುಡದಲ್ಲಿ ಜನರೇಟರಿನ ಮೇಲೊಂದು ಕಣ್ಣಿಟ್ಟುಕೊಂಡು, (ನನ್ನ ಪ್ರಕಟಣೆಗಳ ಮತ್ತು ಆಯ್ದ ವನ್ಯ ಸಂಬಂಧೀ) ಪುಸ್ತಕಗಳ ಸಣ್ಣ ಮಾರಾಟ ಪ್ರದರ್ಶನಕ್ಕೆ ಅಂಗಡಿಯ ನನ್ನ ಬಲಗೈ – ಶಾಂತಾರಾಮ ಸಜ್ಜುಗೊಂಡಿದ್ದ. ಅವನ ಎದುರಿಗೆ ಮೊಂಟೆಪದವಿನ ಹೋಟೆಲ್ ಬಾಬು ನಮ್ಮ ಕ್ಯಾಂಟೀನ್ ನಿರ್ವಣೆಯಲ್ಲಿ ನಿರತನಾಗಿದ್ದ. ವೈಭವ ಇಲ್ಲ, ಆದರೆ ಹೊಟ್ಟೆಗಟ್ಟಿಗೆ ಅವಲಕ್ಕಿ, ಉಪ್ಪಿಟ್ಟು, ಬನ್ನು, ಬಾಳೇಹಣ್ಣು, ಮಜ್ಜಿಗೆ, ಕಾಪಿ, ಚಾ ತಿಂದಷ್ಟೂ (ಅದನ್ನು ಕೆಲವು ಪ್ರತಿಷ್ಠಿತರು ‘ಕೇಳಿದಷ್ಟೂ’ ಎಂದು ಅವರ ಅನುಕೂಲಕ್ಕೆ ತಿದ್ದಿಕೊಂಡು ಪಂಟಿಬಿರಿಯ ತಿಂದದ್ದಲ್ಲದೆ ಬನ್ಸು ಕಟ್ಟಿಕೊಂಡು ಹೋದದ್ದನ್ನು ಹೇಳದಿರಲಾರೆ) ಉಚಿತವಾಗಿ ಕೊಡಲು “On your mark” ಆಗಿದ್ದ. ಪ್ರೇಕ್ಷಾಂಗಣದಲ್ಲಿ ದಪ್ಪ ತಾರ್ಪಾಲನ್ನು ಹರಡಿದ್ದಲ್ಲದೆ, ಪ್ರಾಯಸ್ಥರಿಗೆ ಅಥವಾ ಸೊಂಟಬಾಗದವರಿಗೆ ಒಂದು ಬದಿಯಲ್ಲಿ ಇಪ್ಪತ್ತು ಮೂವತ್ತು ಕುರ್ಚಿಗಳನ್ನೂ ಹಾಕಿದ್ದೆವು. ರಂಗ, ಚೌಕಿಗಳಲ್ಲಿ ನಮ್ಮ ಜವಾಬ್ದಾರಿಯನ್ನಷ್ಟೂ ಚೊಕ್ಕ ಮಾಡಿದೆವು. ‘ಕಾಡ್ಮನೆ’ಯೊಳಗೆ ಇರುವ, ಬರಬಹುದಾದ ಜನರ ಲೆಕ್ಕಾಚಾರದಲ್ಲಿ (ನನ್ನ ಹೆಂಡತಿ) ದೇವಕಿ, ನನ್ನಮ್ಮನ ಸಹಾಯದಲ್ಲಿ (ಸುಮಾರು ಮೂವತ್ತು ಮಂದಿಗೆ) ಅಡುಗೆ ಮಾಡಿ ಮುಗಿಸುವುದರೊಳಗೆ ನಮ್ಮ ರಾಗ ಸುರುವಾಗಿತ್ತು “ದೊಡ್ಡ ಬಟ್ಟಲಮ್ಮಾ ದೊಡ್ಡ ಬಟ್ಟಲೂ.”

Keep reading →

→ 9 CommentsCategories: ಯಕ್ಷಗಾನ

ದೀವಟಿಗೆ ಆಟಕ್ಕೆ ಕೇಳಿ ಹೊಡೆಯುತ್ತಾ…

November 6, 2009 · 8 Comments

‘ಝಗಮಗಿಸುವ ವಿದ್ಯುದ್ದೀಪಾಲಂಕೃತ’ ಎನ್ನುವುದು ಹೆಚ್ಚುಗಾರಿಕೆಯಾಗಿದ್ದ ಕಾಲದಲ್ಲಿ ಯಕ್ಷವೀಕ್ಷಣೆಗೆ ಬಂದವನು ನಾನು. ಎತ್ತರಿಸಿದ ಚೌಕಾಕಾರದ ವೇದಿಕೆಯ ಮೂರೂ ಬದಿಗೆ ಕಂಬದ ಮೇಲಿನುದ್ದಕ್ಕೂ ಮೇಲಿನಡ್ಡಕ್ಕೂ ಬಿಗಿದ ಟ್ಯೂಬ್ ಲೈಟುಗಳು ಏಕಕಾಲಕ್ಕೆ ರಂಗವನ್ನೂ ನಮ್ಮ ಕಣ್ಣನ್ನೂ ತುಂಬುತ್ತಿದ್ದವು. ರಂಗದ ಎದುರಿನ ಭಾರೀ ಬುರುಡೆಯ ಬಲ್ಬ್‌ಗಳು ನಮ್ಮತ್ತ ಮರೆಕಟ್ಟಿಕೊಂಡರೂ ರಂಗಕ್ರಿಯೆಯನ್ನು ಹೆಚ್ಚಿನ ಪ್ರಖರತೆಯಲ್ಲಿ, ಸೂಕ್ಷ್ಮದಲ್ಲಿ ತೋರಿಸುತ್ತಿದ್ದವು. ಮುಂದುವರಿದ ದಿನಗಳಲ್ಲಿ ಈ ದೀಪಗಳಲ್ಲಿ ಹಲವು ತೆರನ ವರ್ಣ ಸಂಯೋಜನೆಗಳು, ಆರಿಸಿ ಬೆಳಗಿಸುವ ಚಮತ್ಕಾರಗಳು ಹೆಚ್ಚಿನ ರಸಪೋಷಣೆಗೆಂದೇ ಬಂದಂತಿತ್ತು. [ಬ್ರಹ್ಮಕಪಾಲ ಪ್ರಸಂಗದಲ್ಲಿ ಬಿಕ್ಷೆಬೇಡುವ ಶಿವನಿಗೆ ಪ್ರೇಕ್ಷಕ-ಭಕ್ತರು (ಪ್ರದರ್ಶನ ಚಟದವರು?) ಎಸೆದ ನಾಣ್ಯ ಬಲ್ಬ್ ಒಡೆದಾಗ ಪಾತ್ರಧಾರಿಯ ಲಾಭದಲ್ಲಿ ಮೇಳದ ಯಜಮಾನನ ಕಷ್ಟ, ನಷ್ಟ ನನಗೂ ತಟ್ಟಿತ್ತು.] ಬರಬರುತ್ತ ಪ್ರೇಕ್ಷಕನ ಕಣ್ಣು ಕುಕ್ಕುವ ದೀಪಗಳು ಬಹುತೇಕ ಮರೆಸೇರಿದರೂ ರಂಗದ ಬೆಳಕಿನ ಹಬ್ಬ ನಡೆದೇ ಇತ್ತು.

Keep reading →

→ 8 CommentsCategories: ಯಕ್ಷಗಾನ

ತೆಂಕು ತಿಟ್ಟಿಗೊಂದು ಶಾಲೆ ಬರಲಿ

October 29, 2009 · 10 Comments

ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ (ಕಲ್ಲುಗುಂಡಿ), ಇದು ಹಲವು ವರ್ಷಗಳಿಂದ ವರ್ಷಕ್ಕೊಮ್ಮೆ ನಡೆಸುತ್ತಿರುವ ಯಕ್ಷೋತ್ಸವ ಬಲು ದೊಡ್ಡ ಕಲಾವಿದರ ಕೂಡುವಿಕೆಯಲ್ಲೂ ಎಲ್ಲೆಲ್ಲಿಂದಲೋ ಬರುವ ಪ್ರೇಕ್ಷಕರಿಂದಲೂ ಬಹುಖ್ಯಾತವಾಗಿದೆ. ಈ ಪ್ರತಿಷ್ಠಾನದಂತೆಯೇ ಇದರ ಅಘೋಷಿತ ಸಹವ್ಯವಸ್ಥೆಗಳು ಮಂಗಳೂರು ಬಳಿಯ ಕೈರಂಗಳದಲ್ಲೂ ವರ್ಷಕ್ಕೊಮ್ಮೆ ಆಟ ಕೂಟಗಳನ್ನು ನಡೆಸುವುದುಂಟು. ಸಾಲದೆಂಬಂತೆ ಒಂದು ವೃತ್ತಿಪರ ಮೇಳವನ್ನೂ ನಡೆಸುತ್ತದೆ. ಇವುಗಳನ್ನು ನಡೆಸುವಲ್ಲಿ ಪ್ರತಿಷ್ಠಾನಕ್ಕೋ ಇತರ ಸಹಸಂಸ್ಥೆಗಳಿಗೋ ನಿರಂತರತೆಯ ಶಿಸ್ತಿದೆ, ಉದ್ದೇಶಪಟ್ಟದ್ದನ್ನು ಪರಿಷ್ಕಾರವಾಗಿ ಒಪ್ಪಿಸುವ ಛಲವಿದೆ. ಇದೇ ೧೭-೧೦-೨೦೦೯ರಂದು ಈ ವರ್ಷದ ಯಕ್ಷೋತ್ಸವ ಅಪರಾಹ್ನ ೨.೩೦ರಿಂದ ತೊಡಗಿ ಮರುದಿನ ಬೆಳಿಗ್ಗೆ ೬.೩೦ರವರೆಗೆ ನಡೆಯಬೇಕಾದದ್ದು ಲಂಬಿಸಿ ‘ಇಪ್ಪತ್ನಾಲ್ಕು ಗಂಟೆಯ’ ಕಾರ್ಯಕ್ರಮವಾದದ್ದಕ್ಕೆ ನಾನು ಆಂಶಿಕ ಸಾಕ್ಷಿ. ನನಗೆ ಸಂಘಟಕರಲ್ಲಿರುವ ವೈಯಕ್ತಿಕ ಆತ್ಮೀಯತೆಯ ಬಲದಲ್ಲಿ, ಇದು ಹಿಂದೆಂದಿಗಿಂತಲೂ ವೈಭವಪೂರ್ಣವಾಗಿ ನಡೆಯಿತು ಎನ್ನುವ ಸಂತೋಷದೊಡನೆ ಪತ್ರ ಮುಖೇನ ಹಂಚಿಕೊಂಡ ಅನಿಸಿಕೆಗಳನ್ನು ಪರಿಷ್ಕರಿಸಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

Keep reading →

→ 10 CommentsCategories: ಯಕ್ಷಗಾನ