Athree Book Center

ದೀವಟಿಗೆ ಆಟಕ್ಕೆ ಕೇಳಿ ಹೊಡೆಯುತ್ತಾ…

November 6, 2009 · 8 Comments

‘ಝಗಮಗಿಸುವ ವಿದ್ಯುದ್ದೀಪಾಲಂಕೃತ’ ಎನ್ನುವುದು ಹೆಚ್ಚುಗಾರಿಕೆಯಾಗಿದ್ದ ಕಾಲದಲ್ಲಿ ಯಕ್ಷವೀಕ್ಷಣೆಗೆ ಬಂದವನು ನಾನು. ಎತ್ತರಿಸಿದ ಚೌಕಾಕಾರದ ವೇದಿಕೆಯ ಮೂರೂ ಬದಿಗೆ ಕಂಬದ ಮೇಲಿನುದ್ದಕ್ಕೂ ಮೇಲಿನಡ್ಡಕ್ಕೂ ಬಿಗಿದ ಟ್ಯೂಬ್ ಲೈಟುಗಳು ಏಕಕಾಲಕ್ಕೆ ರಂಗವನ್ನೂ ನಮ್ಮ ಕಣ್ಣನ್ನೂ ತುಂಬುತ್ತಿದ್ದವು. ರಂಗದ ಎದುರಿನ ಭಾರೀ ಬುರುಡೆಯ ಬಲ್ಬ್‌ಗಳು ನಮ್ಮತ್ತ ಮರೆಕಟ್ಟಿಕೊಂಡರೂ ರಂಗಕ್ರಿಯೆಯನ್ನು ಹೆಚ್ಚಿನ ಪ್ರಖರತೆಯಲ್ಲಿ, ಸೂಕ್ಷ್ಮದಲ್ಲಿ ತೋರಿಸುತ್ತಿದ್ದವು. ಮುಂದುವರಿದ ದಿನಗಳಲ್ಲಿ ಈ ದೀಪಗಳಲ್ಲಿ ಹಲವು ತೆರನ ವರ್ಣ ಸಂಯೋಜನೆಗಳು, ಆರಿಸಿ ಬೆಳಗಿಸುವ ಚಮತ್ಕಾರಗಳು ಹೆಚ್ಚಿನ ರಸಪೋಷಣೆಗೆಂದೇ ಬಂದಂತಿತ್ತು. [ಬ್ರಹ್ಮಕಪಾಲ ಪ್ರಸಂಗದಲ್ಲಿ ಬಿಕ್ಷೆಬೇಡುವ ಶಿವನಿಗೆ ಪ್ರೇಕ್ಷಕ-ಭಕ್ತರು (ಪ್ರದರ್ಶನ ಚಟದವರು?) ಎಸೆದ ನಾಣ್ಯ ಬಲ್ಬ್ ಒಡೆದಾಗ ಪಾತ್ರಧಾರಿಯ ಲಾಭದಲ್ಲಿ ಮೇಳದ ಯಜಮಾನನ ಕಷ್ಟ, ನಷ್ಟ ನನಗೂ ತಟ್ಟಿತ್ತು.] ಬರಬರುತ್ತ ಪ್ರೇಕ್ಷಕನ ಕಣ್ಣು ಕುಕ್ಕುವ ದೀಪಗಳು ಬಹುತೇಕ ಮರೆಸೇರಿದರೂ ರಂಗದ ಬೆಳಕಿನ ಹಬ್ಬ ನಡೆದೇ ಇತ್ತು.

Keep reading →

→ 8 CommentsCategories: ಯಕ್ಷಗಾನ

ತೆಂಕು ತಿಟ್ಟಿಗೊಂದು ಶಾಲೆ ಬರಲಿ

October 29, 2009 · 9 Comments

ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ (ಕಲ್ಲುಗುಂಡಿ), ಇದು ಹಲವು ವರ್ಷಗಳಿಂದ ವರ್ಷಕ್ಕೊಮ್ಮೆ ನಡೆಸುತ್ತಿರುವ ಯಕ್ಷೋತ್ಸವ ಬಲು ದೊಡ್ಡ ಕಲಾವಿದರ ಕೂಡುವಿಕೆಯಲ್ಲೂ ಎಲ್ಲೆಲ್ಲಿಂದಲೋ ಬರುವ ಪ್ರೇಕ್ಷಕರಿಂದಲೂ ಬಹುಖ್ಯಾತವಾಗಿದೆ. ಈ ಪ್ರತಿಷ್ಠಾನದಂತೆಯೇ ಇದರ ಅಘೋಷಿತ ಸಹವ್ಯವಸ್ಥೆಗಳು ಮಂಗಳೂರು ಬಳಿಯ ಕೈರಂಗಳದಲ್ಲೂ ವರ್ಷಕ್ಕೊಮ್ಮೆ ಆಟ ಕೂಟಗಳನ್ನು ನಡೆಸುವುದುಂಟು. ಸಾಲದೆಂಬಂತೆ ಒಂದು ವೃತ್ತಿಪರ ಮೇಳವನ್ನೂ ನಡೆಸುತ್ತದೆ. ಇವುಗಳನ್ನು ನಡೆಸುವಲ್ಲಿ ಪ್ರತಿಷ್ಠಾನಕ್ಕೋ ಇತರ ಸಹಸಂಸ್ಥೆಗಳಿಗೋ ನಿರಂತರತೆಯ ಶಿಸ್ತಿದೆ, ಉದ್ದೇಶಪಟ್ಟದ್ದನ್ನು ಪರಿಷ್ಕಾರವಾಗಿ ಒಪ್ಪಿಸುವ ಛಲವಿದೆ. ಇದೇ ೧೭-೧೦-೨೦೦೯ರಂದು ಈ ವರ್ಷದ ಯಕ್ಷೋತ್ಸವ ಅಪರಾಹ್ನ ೨.೩೦ರಿಂದ ತೊಡಗಿ ಮರುದಿನ ಬೆಳಿಗ್ಗೆ ೬.೩೦ರವರೆಗೆ ನಡೆಯಬೇಕಾದದ್ದು ಲಂಬಿಸಿ ‘ಇಪ್ಪತ್ನಾಲ್ಕು ಗಂಟೆಯ’ ಕಾರ್ಯಕ್ರಮವಾದದ್ದಕ್ಕೆ ನಾನು ಆಂಶಿಕ ಸಾಕ್ಷಿ. ನನಗೆ ಸಂಘಟಕರಲ್ಲಿರುವ ವೈಯಕ್ತಿಕ ಆತ್ಮೀಯತೆಯ ಬಲದಲ್ಲಿ, ಇದು ಹಿಂದೆಂದಿಗಿಂತಲೂ ವೈಭವಪೂರ್ಣವಾಗಿ ನಡೆಯಿತು ಎನ್ನುವ ಸಂತೋಷದೊಡನೆ ಪತ್ರ ಮುಖೇನ ಹಂಚಿಕೊಂಡ ಅನಿಸಿಕೆಗಳನ್ನು ಪರಿಷ್ಕರಿಸಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

Keep reading →

→ 9 CommentsCategories: ಯಕ್ಷಗಾನ

ಬರಗಾಲದಲ್ಲಿ ಮಸಾಲೆದೋಸೆ

October 24, 2009 · 11 Comments

ಕರ್ನೂಲಿನ ನನ್ನ ಹಿರಿಯ ಗೆಳೆಯ ಶ್ರೀ ಚಂದ್ರಶೇಖರ ಕಲ್ಕೂರರ ಸ್ಥಿರ, ಚರ ಸೊತ್ತುಗಳೆಲ್ಲ ಈಚೆಗೆ ಅವರ ಮಾತಿನಲ್ಲೇ ಹೇಳುವಂತೆ ‘ಮೂವತ್ತೆರಡು ಗಂಟೆಗಳ ಕಾಲ ತುಂಗಭದ್ರಮ್ಮನ ಹೊಟ್ಟೆಯಲ್ಲಿತ್ತು.’

ಚಂದ್ರಶೇಖರ ಕಲ್ಕೂರರ ಅಜ್ಜ ಊರಿನಲ್ಲಿ (ಉಡುಪಿ ಜಿಲ್ಲೆಯ ಬ್ರಹ್ಮಾವರ) ಹೊಟ್ಟೆಗೂ ಗತಿಯಿಲ್ಲದ ಕಾಲದಲ್ಲಿ ‘ಒಂದು ಸೌಟು’ ಹಿಡಿದುಕೊಂಡು ಭವಿಷ್ಯ ಅರಸಿ ಆಂಧ್ರಪ್ರದೇಶಕ್ಕೆ ವಲಸೆಹೋದವರು. ‘ಅನ್ನ ಮಾರಿ’ ಮಗ, ಮೊಮ್ಮಗನ ಕಾಲಕ್ಕೆ ಸಮೃದ್ಧಿ, ವಿದ್ಯೆ, ಸಂಸ್ಕೃತಿಗಳ ನೆಲೆ ಕಾಣಿಸಿದರು. ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಮೋಟಾರ್ ಸೈಕಲ್ಲಿನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಕಲ್ಕೂರರ ಹೋಟೆಲ್ ಕರ್ನೂಲಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದು. ಚಂದ್ರಶೇಖರ ಕಲ್ಕೂರ ಆಂಧ್ರಪ್ರದೇಶ ಹೋಟೆಲಿಗರ ಸಂಘದ ಅಧ್ಯಕ್ಷ. ಇವರು ನೆಚ್ಚಿದ ಪಕ್ಷ ಕಾಂಗ್ರೆಸ್ಸಾದರೂ ‘ಪಕ್ಷಪಾತ’ ಇವರ ಸಾರ್ವಜನಿಕ ಸೇವೆಯಲ್ಲಿರಲಿಲ್ಲ. ಅಪಾರ ಓದು (ಆಂಧ್ರದ ವಿದ್ಯಾರ್ಥಿಯಾದರೂ ಸ್ವಂತ ಗಳಿಕೆಯಲ್ಲಿ ಬಲು ದೊಡ್ಡ ಕನ್ನಡ ಓದುಗ ಮತ್ತು ಕಾರ್ಯಕರ್ತನೂ ಹೌದು), ಲೋಕಾನುಭವ ಮತ್ತು ಅಪರಿಮಿತ ಮಿತ್ರಬಳಗದ ಚಂದ್ರಶೇಖರರು ಕಾನೂನು ಪದವೀಧರರೂ ಹೌದು. ಈಚೆಗೆ ತನ್ನ ವಾಣಿಜ್ಯ ವ್ಯವಹಾರಗಳನ್ನು ಉತ್ತರಾಧಿಕಾರಿಗಳಿಗೆ ಬಿಟ್ಟು ಹವ್ಯಾಸೀ ವಕೀಲರಾಗಿದ್ದರು. ಇವರ ಸಾಮಾಜಿಕ ಸಂಶೋಧನಾಸಕ್ತಿ ಕರ್ನೂಲಿನ ಪಕ್ಕದ ನದಿ ತುಂಗಭದ್ರೆಯ ಕುರಿತು ವಿಸ್ತಾರವಾಗಿ ಹರಿದಿತ್ತು. ದುರಂತವೆಂದರೆ ಅದೇ ತುಂಗಭದ್ರೆ ಮೊನ್ನೆ ಶುದ್ಧ ಮಾನವಕೃತ ಅವ್ಯವಸ್ಥೆಯಲ್ಲಿ ಇವರನ್ನು ಕೇವಲ ಉಟ್ಟ ಬಟ್ಟೆಯಲ್ಲಿ ದಿಕ್ಕೆಡಿಸಿ ಓಡಿಸಿತ್ತು.

Keep reading →

→ 11 CommentsCategories: ಹೀಗೆ ಒಂದಿಷ್ಟು

ಭೀಮ ಬಿದ್ದಾ ಮತ್ತೆರಡು ತಿರುಗೂಳಿ ವೃತ್ತಾಂತ

October 17, 2009 · 7 Comments

4ಇತಿಹಾಸದ ‘ಅಶೋಕ’ವನ್ನು ನನ್ನ ತಂದೆತಾಯಿಯರು ನನಗೆ ಕೊಟ್ಟದ್ದು ನಿಜ. ಆದರೆ ‘ಚಕ್ರವರ್ತಿ’ಯನ್ನೂ ಎಳೆದುಕೊಳ್ಳುವಂತಾದ್ದು ನನ್ನ ಹವ್ಯಾಸ ಬಲದಲ್ಲಿ. ದಕ್ಷಿಣ ಭಾರತದ ಒಂದು ಸಣ್ಣ ಅಂಶವನ್ನೂ ಸೇರಿಸಿದಂತೆ ಈ ವಲಯದ ನನ್ನ ಮೋಟಾರು ಸೈಕಲ್ ಪ್ರವಾಸ ಕಥನಗಳ ಸಂಕಲನವನ್ನು ನಾನೇ ‘ಚಕ್ರವರ್ತಿಗಳು’ ಎಂದು ಹೆಸರಿಸಿ, ಪ್ರಕಟಿಸಿದ್ದು (ಸದ್ಯ ಅದರೆಲ್ಲಾ ಪ್ರತಿಗಳು ಮಾರಿ ಮುಗಿದಿವೆ) ನಿಮಗೆ ತಿಳಿದೇ ಇರಬೇಕು. ಎಷ್ಟೋ ಬಾರಿ ನಾನು/ನನ್ನ ತಂಡ ಇನ್ನೊಂದೇ ಲಕ್ಷ್ಯಕ್ಕೆ ತಿರುಗಾಡಿದ್ದರೂ ಮಾರ್ಗಕ್ರಮಣದ ವೈಶಿಷ್ಟ್ಯ ದಾಖಲಾರ್ಹ. ಅಂಥ ಕೆಲವನ್ನು ಇಲ್ಲಿ ನೆನಪಿನಿಂದ ಹೆಕ್ಕಿ ಪೋಣಿಸುತ್ತೇನೆ.

Keep reading →

→ 7 CommentsCategories: ಪ್ರವಾಸ ಕಥನ · ಹೀಗೆ ಒಂದಿಷ್ಟು